ವಿದ್ಯಾ ಕೋಳ್ಯೂರುಗೆ `ಕಲಾಶ್ರೀ-2013` ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜುಲೈ 4 , 2013
|
ಮೂಡುಬಿದಿರೆ : ಬೆಳುವಾಯಿಯ ಶ್ರೀಯಕ್ಷದೇವ ಮಿತ್ರಕಲಾಮಂಡಳಿ ಆಶ್ರಯದಲ್ಲಿ ಮೂಡುಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ `ಯಕ್ಷ ವೈಭವ 2013` 4ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಮತಿ ವನಜಾಕ್ಷಿ ಅಮ್ಮ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೊಡಮಾಡುವ `ಕಲಾಶ್ರೀ ಪ್ರಶಸ್ತಿ-2013`ಯನ್ನು ವಿದ್ಯಾ ಕೋಳ್ಯೂರು ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದ್ಯಾ ಕೋಳ್ಯೂರು, ಯಕ್ಷಗಾನ ಗಂಡುಕಲೆ ಎನ್ನುವುದು ಅದರ ಶ್ರೇಷ್ಠತೆಗೆ ಸಲ್ಲುವ ಗೌರವೇ ಹೊರತು ಅದು ಪುರುಷರಿಗೆ ಮಾತ್ರ ಸೀಮಿತವಾದದ್ದು ಎಂದಲ್ಲ. ಯಕ್ಷಗಾನವನ್ನು ಯಾವುದೇ ತಾರತಮ್ಯವಿಲ್ಲದೆ ಪ್ರೋತ್ಸಾಹಿಸಬೇಕಾಗಿದೆ. ಪಾರಂಪರಿ ಕಲೆಯಾದ ಯಕ್ಷಗಾನವು ಶಿಸ್ತಿನ ಚೌಕಟ್ಟಿನಿಂದ ಹೊರಬಂದಾಗ ಅದನ್ನು ಪ್ರಜ್ಞಾವಂತ ಪ್ರೇಕ್ಷಕರು ಪ್ರಶ್ನಿಸಬೇಕು ಎಂದು ಹೇಳಿದರು.
ಮಣಿಪಾಲದ ಡಾ ಭಾಸ್ಕರಾನಂದ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕಲಾವಿದರಿಂದಾಗಿ ಮಾತ್ರವಲ್ಲ. ಕಲೆಯ ಬಗ್ಗೆ ಕಾಳಜಿಯಿರುವ ಸಹೃದಯ ಪ್ರೇಕ್ಷಕರಿಂದ ಯಕ್ಷಗಾನವು ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟರು. ಹಿರಿಯ ಮದ್ದಳೆಗಾರರಾದ ಗೋಪಾಲಕೃಷ್ಣ ಕುರುಪ್ ಹಾಗೂ ಬನ್ನಂಜೆ ಸಂಜೀವ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಶ್ರೀನಿವಾಸ ಭಟ್, ಸತೀಶ್ ಭಟ್, ಯಕ್ಷಮಿತ್ರಕಲಾಮಂಡಳಿಯ ಗೌರವಾಧ್ಯಕ್ಷ ಕೆ.ಶ್ರೀಪತಿ ಭಟ್, ಪೌಂಡೇಷನ್ ನ ಟ್ರಸ್ಟಿಗಳಾದ ಬಲರಾಮ ಕೆ.ಎಸ್, ಬಾಲಕೃಷ್ಣ ಭಟ್, ಅಲಕಾ ಬಲರಾಮ, ದೀಪ್ತಿ ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಕಲಾಮಂಡಳಿಯ ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಮಹಾವೀರ ಪಾಂಡಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನವರಸ ವೈಭವ ನಡೆಯಿತು.
ಕೃಪೆ : http://www.nammabedra.com/
|
|
|